Monday, 18 July 2016

                                          




 ಮರೆಯಾದ ಯಕ್ಷ ವಾಚಸ್ಪತಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ


ಸಂಗೀತ, ಸಾಹಿತ್ಯ, ನೃತ್ಯ, ವರ್ಣಾಲಂಕಾರಗಳ ಸಮಪಾಕದಿಂದ ಸಿದ್ಧಗೊಳ್ಳುವ ವಿಶಿಷ್ಟ ರಂಗಪ್ರಕಾರವಾದ ಯಕ್ಷಗಾನದಲ್ಲಿ ನೂರಾರು ಕಲಾವಿದರು ತಮ್ಮ ಪ್ರತಿಭಾ ಪ್ರಪೂರ್ಣತೆಯಿಂದ ಜನಮಾನಸದಲ್ಲಿ ನೆಲೆಯಾಗಿದ್ದಾರೆ. ಅಂಥವರಲ್ಲಿ ವಿವಿಧ ಬಗೆಯ ರಂಗತಾಲೀಮು, ತರಬೇತಿ ಹಾಗೂ ಎಡೆಬಿಡದ ಪರಿಶ್ರಮದಿಂದ ಯಕ್ಷಗಾನದ ವಿವಿಧಾಂಗಗಳಲ್ಲಿ ಪಳಗಿ ದವರಿದ್ದಾರೆ. ಆದರೆ ಯಕ್ಷಗಾನದ ವಾಚಿಕ ವಿಭಾಗ ಅಷ್ಟು ಸುಲಭವಾಗಿ ಎಲ್ಲರಿಗೂ ಒಲಿಯುವುದಿಲ್ಲ. ನುರಿತ ನಿರ್ದೇಶನ‌ದಲ್ಲಿ ತರಬೇತಿ ಪಡೆದು ಓರ್ವ ಸಮರ್ಥ ವೇಷಧಾರಿಯಾಗಬಲ್ಲ; ಆದರೆ ಅರ್ಥಧಾರಿಯಾಗಲು ಸತತ ಅಭ್ಯಾಸ, ಆಳವಾದ ಅಧ್ಯಯನ ಹಾಗೂ ಸ್ವತಂತ್ರ ಚಿಂತನೆಗಳ ಅಗತ್ಯವಿದೆ. ಆದ್ದರಿಂದಲೇ ತಲೆಮಾರುಗಳಿಂದ ಲೆಕ್ಕ ಹಾಕಿದರೂ ಯಕ್ಷಗಾನದ ಹೆಸರಾಂತ ಅರ್ಥಧಾರಿಗಳ ಸಂಖ್ಯೆ ಇನ್ನೂ ನೂರರ ಆಸುಪಾಸಿನಲ್ಲೇ ಇದೆ.
ಅರ್ಥಗಾರಿಕೆಯಂತೆ ಪ್ರಸಂಗ ರಚನೆಯೂ ವಿಶೇಷ ಪರಿಶ್ರಮ ಬಯಸುವ ಕ್ಷೇತ್ರ. ಇಲ್ಲಿ ಕಾವ್ಯ ಶಕ್ತಿಯೊಂದಿಗೆ ಛಂದಸ್ಸು, ಅಲಂಕಾರ, ಯತಿ ಗಣ ಪ್ರಾಸಗಳ ಅಗಾಧ ಅನುಭವ ಬೇಕಾಗುತ್ತದೆ. ಈಚೆಗೆ ಯಕ್ಷಗಾನ ಪ್ರಸಂಗಕರ್ತರ ಸಂಖ್ಯೆ ಯೇನೂ ಕಡಿಮೆಯಿಲ್ಲ. ಆದರೆ ಅವರಲ್ಲಿ ಅಗ್ರಪಂಕ್ತಿಯಲ್ಲಿ ಗಣಿಸಲ್ಪಡುವವರು ಬೆರಳೆಣಿಕೆಯ ಮಂದಿ. ಅಂಥವರಲ್ಲಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರು ಒಬ್ಬರು. ಅವರು ಯಕ್ಷಗಾನ ವೇಷಧಾರಿಯಾಗಿದ್ದುದರ ಜತೆಗೆ ಒಬ್ಬ ಜನಪ್ರಿಯ ಅರ್ಥಧಾರಿ ಮತ್ತು ಪ್ರಸಂಗಕರ್ತನಾಗಿದ್ದರು. ತೆಂಕು ಹಾಗೂ ಬಡಗುತಿಟ್ಟಿನ ಯಕ್ಷರಂಗದಲ್ಲಿ ಸಮಾನವಾಗಿ ಹೊಕ್ಕು ಬಳಕೆಯಿರುವ ಓರ್ವ ಶ್ರೇಷ್ಠ ಕಲಾಕಾರ ಅವರಾಗಿದ್ದರು.
ಯಕ್ಷಗಾನ ರಂಗದಲ್ಲಿ "ಸಿದ್ಧಕಟ್ಟೆದ್ವಯರು' ಅರ್ಥಗಾರಿಕೆಯ ಅಮೂಲ್ಯ ರತ್ನಗಳು. ಚೆನ್ನಪ್ಪ ಶೆಟ್ಟಿ ಹಾಗೂ ವಿಶ್ವನಾಥ ಶೆಟ್ಟಿ ಇವರಿಬ್ಬರ ಅರ್ಥಗಾರಿಕೆಯನ್ನು ಕೇಳಿ ತಲೆದೂಗಿದವರು ಈ ಮಾತನ್ನು ಒಪ್ಪಲೇಬೇಕು. ಚೆನ್ನಪ್ಪರದ್ದು ಶೇಣಿಯವರ ದಾರಿ; ವಿಶ್ವನಾಥರದ್ದು ಸಾಮಗರ ವೈಖರಿ. ಇವರಿಬ್ಬರನ್ನು ಅಣ್ಣತಮ್ಮಂದಿರೆಂದೇ ತಿಳಿದವರು ಬಹಳ ಮಂದಿ. ಆದರೆ ಅವರದು ಕೇವಲ ಊರಿನ ಹಾಗೂ ಯಕ್ಷಗಾನದ ಸಂಬಂಧ ಮಾತ್ರ. ಕನ್ನಡ ಹಾಗೂ ತುಳುಭಾಷೆಗಳಲ್ಲಿ ಬಹಳ ಸುಂದರವಾಗಿ, ಅಸ್ಖಲಿತ ವಾಗ್ಝರಿಯೊಂದಿಗೆ ಪುಂಖಾನುಪುಂಖವಾಗಿ ಹೊರಹೊಮ್ಮುವ ಶಬ್ದಪುಂಜಗಳಿಂದ ಕೇಳುಗರ ಕಿವಿನಿಮಿರುವಂತೆ ಮಾಡುವ ಲೋಹಚುಂಬಕ ಶಕ್ತಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರದು. ಶಬ್ದಗಳ ದುಂದುವೆಚ್ಚವಿಲ್ಲದೆ ಶ್ರೀಸಾಮಾನ್ಯನನ್ನೂ ಮುಟ್ಟುವಂತೆ ವಿಚಾರವನ್ನು ಮಂಡಿಸುವ ಅವರ ಮಾತಿನ ಶೈಲಿ ಎಲ್ಲರಿಗೂ ಆಪ್ತವಾದುದು. ಆದ್ದರಿಂದಲೇ ಅಭಿಮಾನಿಗಳು ಅವರನ್ನು "ಯಕ್ಷಗಾನ ವಾಚಸ್ಪತಿ' ಎಂದು ಕರೆದರು. ಇದಿರಾಳಿಗೆ ಒಂದಿಷ್ಟೂ ತೊಡಕುಂಟು ಮಾಡದ ಅವರ ಅರ್ಥಗಾರಿಕೆಯನ್ನು ಸಹಕಲಾವಿದರೂ ಇಷ್ಟಪಡುತ್ತಾರೆ.
ಬಂಟ್ವಾಳ ತಾಲೂಕು ಅಜ್ಜಿಬೆಟ್ಟು ಗ್ರಾಮದ ಬಾರ್ಜರಡ್ಡ ಎಂಬಲ್ಲಿ ಜುಲೈ 24, 1957ರಲ್ಲಿ ಜನಿಸಿದ ವಿಶ್ವನಾಥ ಶೆಟ್ಟಿ ದಿ| ಕೊರಗಶೆಟ್ಟಿ ಮತ್ತು ರೇವತಿ ದಂಪತಿಯ ಐದು ಮಂದಿ ಮಕ್ಕಳಲ್ಲಿ ಹಿರಿಯರು. ಅವರಿಗೆ ಏಳನೇ ತರಗತಿಯಲ್ಲೇ ಯಕ್ಷಗಾನದ ಗೀಳು ಹಿಡಿದಿತ್ತು. ಹಾಗೆಂದು ಯಾವುದೇ ಗುರುಕುಲದಲ್ಲಿ ಅವರು ಯಕ್ಷಗಾನ ದೀಕ್ಷೆ ಪಡೆದಿಲ್ಲ. ಏನಿದ್ದರೂ ಅವರದು ಏಕಲವ್ಯ ಸಾಧನೆ. ಆದ್ದರಿಂದಲೇ ಯಕ್ಷಗಾನದ ನಾಟ್ಯ ವಿಭಾಗದಲ್ಲಿ ಅವರು ಅಷ್ಟಕ್ಕಷ್ಟೇ. ಪದವಿಪೂರ್ವ ಶಿಕ್ಷಣ ಪೂರೈಸಿ ಜೀವನ ನಿರ್ವಹಣೆಗೆ ಹೊಟೇಲು, ಎಲ್‌ಐಸಿ ಹೀಗೆ ಬೇರೆ ಬೇರೆ ಉದ್ಯೋಗಗಳನ್ನರಸಿ ಹೋದ ಅವರನ್ನು ಕೊನೆಗೂ ಕೈ ಹಿಡಿದದ್ದು ಯಕ್ಷಗಾನವೇ.
ಕರ್ನೂರು ಕೊರಗಪ್ಪ ರೈಯವರ ಕದ್ರಿ ಮೇಳದ ಮೂಲಕ ಕಲಾವಿದನಾಗಿ ವಿಶ್ವನಾಥ ಶೆಟ್ಟರು ಬೆಳಕಿಗೆ ಬಂದರು. ಕಟೀಲು, ಕರ್ನಾಟಕ, ಸಾಲಿಗ್ರಾಮ, ಮಂಗಳಾದೇವಿ, ಹಿರಿಯಡ್ಕ ಹೀಗೆ ತೆಂಕು-ಬಡಗಿನ ಮೇಳಗಳಲ್ಲಿ ಸುಮಾರು 35 ವರ್ಷಗಳ ತಿರುಗಾಟ ಮಾಡಿರುವ ಅವರು ತಮ್ಮ ವೃತ್ತಿ ಬದುಕಿನೊಂದಿಗೆ ತಾಳಮದ್ದಳೆಗಳಲ್ಲೂ ಕಾಣಿಸಿಕೊಂಡರು. ಪ್ರಸಿದ್ಧರ ಕೂಟಗಳಲ್ಲಿ ಬೇಡಿಕೆಯ ಅರ್ಥಧಾರಿಯೆನಿಸಿಕೊಂಡರು. ರಾಮ, ಕೃಷ್ಣ, ಸುಧನ್ವ, ಭೀಷ್ಮ, ರುಕಾ¾ಂಗದ, ವಿಷ್ಣು, ಈಶ್ವರ, ಪರಶುರಾಮ, ವಿದುರ, ಸಂಜಯ, ಧರ್ಮರಾಯ, ಅರ್ಜುನ, ಕರ್ಣ ಇತ್ಯಾದಿ ಅವರಿಗೆ ಹೆಸರು ತಂದ ಪಾತ್ರಗಳು. ಮಾನಿಷಾದ ಪ್ರಸಂಗದ ವಾಲ್ಮೀಕಿಯ ಪಾತ್ರಚಿತ್ರಣವಂತೂ ಅವರಿಗೇ ಮೀಸಲು. ತುಳು ಪ್ರಸಂಗಗಳಲ್ಲಿ ಪೆರುಮಳ ಬಲ್ಲಾಳ, ಮಲ್ಲಯ್ಯ ಬುದ್ಯಂತ, ಬಂಗರಸು, ಕಾಂತು ಪೂಂಜ, ಕೊಡ್ಸರಾಳ್ವ ಮೊದಲಾದ ಪಾತ್ರಗಳಿಗೆ ಅವರು ಜೀವತುಂಬಿದ್ದಾರೆ.
ಯಕ್ಷಗಾನ ಪ್ರಸಂಗ ರಚನೆಯಲ್ಲಿ ಸಿದ್ಧಕಟ್ಟೆ ಸಿದ್ಧಹಸ್ತರು. ವರ್ಣವೈಷಮ್ಯ, ವಿಷಮಸಮರಂಗ, ಕನ್ಯಾಂತರಂಗ, ಶ್ರೀರಾಮ ಸೇತು, ಶಶಿವಂಶವಲ್ಲರಿ, ಜ್ವಾಲಾ-ಜಾಹ್ನವಿ, ಚಾಣಕ್ಯ ತಂತ್ರ (ಕನ್ನಡ), ಬೊಳ್ಳಿದಂಡಿಗೆ, ಕೆಂಡಸಂಪಿಗೆ, ರತ್ನರಾಧಿಕೆ, ಪಟ್ಟದ ದೈವ, ಗರುಡ ರೇಖೆ (ತುಳು) ಮುಂತಾದ ಅವರ ಪ್ರಸಂಗಗಳು ಮೇಳಗಳಲ್ಲಿ ಜಯಭೇರಿ ಬಾರಿಸಿವೆ. ಆಕಾಶವಾಣಿ, ಸಿ.ಡಿ., ವಿ.ಸಿ.ಡಿ. ಗಳಿಗಾಗಿ ಹತ್ತಾರು ಕಿರುಪ್ರಸಂಗಗಳನ್ನು ಅವರು ಬರೆದಿದ್ದಾರೆ. ಕರ್ನಾಟಕ ಯಕ್ಷಭಾರತಿ, ಪುತ್ತೂರು ತಂಡದೊಂದಿಗೆ ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಪಾತ್ರ ವಹಿಸಿದ್ದಾರೆ. ಕಳೆದ ಹದಿಮೂರು ವರ್ಷಗಳಿಂದ ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗದ ಸರಣಿ ತಾಳಮದ್ದಳೆ ಕಾರ್ಯಕ್ರಮಗಳಲ್ಲಿ ಅವರು ಖಾಯಂ ಅರ್ಥಧಾರಿಯಾಗಿದ್ದರು.
ಸೀತಾನದಿ ಗಣಪಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ, ಅಜೆಕಾರು ಕಲಾಭಿಮಾನ ಬಳಗದ ಯಕ್ಷರûಾ ಪ್ರಶಸ್ತಿ, ಅರುವ ಕೊರಗಪ್ಪ ಶೆಟ್ಟಿ ಪ್ರಶಸ್ತಿ, ಸ್ಕಂದ ಪುರಸ್ಕಾರ ಇತ್ಯಾದಿ ಗೌರವ-ಸಮ್ಮಾನಗಳಿಗೆ ಅವರು ಪಾತ್ರರಾಗಿದ್ದಾರೆ.
ಜುಲೈ 1, 2016ರಂದು ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರು ಮಾತಿನಲೋಕದಿಂದ ಶಾಶ್ವತವಾಗಿ ನಿರ್ಗಮಿಸಿದರು. ಸುಮಾರು ಐದು ತಿಂಗಳ ಜೀವನ್ಮರಣ ಹೋರಾಟದಲ್ಲಿ ಸಾವಿನ ಕೈ ಮೇಲಾಯ್ತು; ಮಾತು ಮೌನವಾಯ್ತು. ಯಕ್ಷರಂಗದ ಅಶ್ವಿ‌ನೀ ದೇವತೆಗಳಂತಿದ್ದ ಸಿದ್ಧಕಟ್ಟೆದ್ವಯರು ಅಮರಲೋಕದಲ್ಲಿ ಒಂದಾದರೇನೋ.ಆದರೆ ಅವರೊಂದಿಗೆ ಒಡನಾಡಿದ ನಮಗೆ ಅವರ ಅಗಲುವಿಕೆಯನ್ನು ಭರಿಸಲಾದೀತೆ!

ಭಾಸ್ಕರ ರೈ ಕುಕ್ಕುವಳ್ಳಿ

Read more at http://www.udayavani.com/kannada/news/art-culture/157381/vishwanath-shetty-siddhakatte-inside-the-sprite-vachaspati#oPOrVrRyCTMojdI4.99

No comments:

Post a Comment